Back to Top

ಅಭಿಮಾನ ಸ್ಟುಡಿಯೋ ಪಕ್ಕದ 2 ಎಕರೆ ಜಾಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ 75ನೇ ಜನ್ಮದಿನಾಚರಣೆ

SSTV Profile Logo SStv September 18, 2025
ಅಭಿಮಾನ ಸ್ಟುಡಿಯೋ ಬದಲು ಪಕ್ಕದ ಜಾಗದಲ್ಲಿ ಯಜಮಾನರ ಹುಟ್ಟುಹಬ್ಬ ಸೆಲೆಬ್ರೇಷನ್
ಅಭಿಮಾನ ಸ್ಟುಡಿಯೋ ಬದಲು ಪಕ್ಕದ ಜಾಗದಲ್ಲಿ ಯಜಮಾನರ ಹುಟ್ಟುಹಬ್ಬ ಸೆಲೆಬ್ರೇಷನ್

ಕನ್ನಡದ ಪ್ರೀತಿಯ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಆದರೆ ಈ ಬಾರಿ ಸಂಭ್ರಮಾಚರಣೆಗೆ ಅಭಿಮಾನ ಸ್ಟುಡಿಯೋ ಆವರಣದಲ್ಲಿ ಅವಕಾಶ ಸಿಗದಿದ್ದ ಕಾರಣ, ಅದರ ಪಕ್ಕದಲ್ಲಿರುವ 2 ಎಕರೆ ಜಾಗವನ್ನೊಂದು ದಿನದ ಮಟ್ಟಿಗೆ ಬಾಡಿಗೆ ಪಡೆದು ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಈ ಕುರಿತು ಮಾತನಾಡುತ್ತಾ, “ಅಭಿಮಾನ ಸ್ಟುಡಿಯೋದಲ್ಲೇ ಆಚರಿಸಲು ಸಾಧ್ಯವಾಗದಿರುವುದು ಅಭಿಮಾನಿಗಳ ಮನದಲ್ಲಿ ನೋವನ್ನು ತಂದಿದೆ. ಆದರೆ, ಅದಕ್ಕೆ ಪರ್ಯಾಯವಾಗಿ ಪಕ್ಕದ ಜಾಗದಲ್ಲಿ ಮಂಟಪ ನಿರ್ಮಿಸಿ, ಪೂಜೆ, ಅನ್ನದಾನ, ರಕ್ತದಾನ, ನೋಂದಣಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗಿದೆ. ಸ್ಟುಡಿಯೋದಲ್ಲಿ ಏನಾಗುತ್ತಿತ್ತೋ ಅದೇ ರೀತಿಯ ಸಂಭ್ರಮ ಇಲ್ಲಿ ನಡೆಯುತ್ತಿದೆ” ಎಂದಿದ್ದಾರೆ.

ವಿಷ್ಣುವರ್ಧನ್ ಅವರ ಶ್ರದ್ಧಾವಂತರಾದ ಕಿಚ್ಚ ಸುದೀಪ್, ಅಭಿಮಾನ ಸ್ಟುಡಿಯೋ ಪಕ್ಕದಲ್ಲೇ ಅರ್ಧ ಎಕರೆ ಜಾಗ ಪಡೆದು ‘ವಿಷ್ಣು ದರ್ಶನ ಕೇಂದ್ರ’ವನ್ನು ಸ್ಥಾಪಿಸುವ ಯೋಜನೆ ಮಾಡಿದ್ದಾರೆ. ಇದರ ನೀಲ ನಕ್ಷೆ ಈಗಾಗಲೇ ಸಿದ್ಧವಾಗಿದ್ದು, ಸೆಪ್ಟೆಂಬರ್ 18 ರಂದು ಕಲಾವಿದರ ಸಂಘದಲ್ಲಿ ಸಂಜೆ 4.30ಕ್ಕೆ ಅದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಇತ್ತೀಚೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಆಗಿದ್ದು, ಇದು ಅಭಿಮಾನಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಅವರ ಸಮಾಧಿಯ ಮೇಲೆ ನಿರ್ಮಿಸಿದ್ದ ಮಂಟಪ ನೆಲಸಮಗೊಂಡಿರುವುದು ನೋವು ತಂದಿದ್ದರೂ, ಅಭಿಮಾನಿಗಳು ಪಕ್ಕದ ಜಾಗದಲ್ಲಿ ಇದೇ ಉತ್ಸಾಹದೊಂದಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ವೀರಕಪುತ್ರ ಶ್ರೀನಿವಾಸ್ ಹಾಗೂ ಮುನ್ನೂರಕ್ಕೂ ಹೆಚ್ಚು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರಿಯ ನಟನಿಗೆ ಗೌರವ ಸಲ್ಲಿಸಿದ್ದಾರೆ. ಅಭಿಮಾನ ಸ್ಟುಡಿಯೋದಲ್ಲಿ ಆಚರಣೆ ಆಗದಿದ್ದರೂ, ಅದರ ಪಕ್ಕದಲ್ಲೇ ನಡೆಯುತ್ತಿರುವ ಈ ಸಂಭ್ರಮ ಅಭಿಮಾನಿಗಳ ನಿಷ್ಠೆ ಮತ್ತು ಪ್ರೀತಿ ಎಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ.