Back to Top

“ಬೇಕಾಬಿಟ್ಟಿ ಕಾಮೆಂಟ್ ಮಾಡೋರಿಗೆ ಗಂಡ್ಸು ಅಂತ ಹೇಳೋಕೆ ಆಗುತ್ತಾ?”: ಟ್ರೋಲ್ಸ್‌ ವಿರುದ್ಧ ಕಿಡಿಕಾರಿದ ಪ್ರಜ್ವಲ್ ದೇವರಾಜ್

SSTV Profile Logo SStv September 5, 2025
ಕರಾವಳಿ ಶೂಟಿಂಗ್ ಮಧ್ಯೆ ಪ್ರಜ್ವಲ್ ದೇವರಾಜ್ ಎಚ್ಚರಿಕೆ
ಕರಾವಳಿ ಶೂಟಿಂಗ್ ಮಧ್ಯೆ ಪ್ರಜ್ವಲ್ ದೇವರಾಜ್ ಎಚ್ಚರಿಕೆ

ಕರಾವಳಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್‌ನ ನಟ ಪ್ರಜ್ವಲ್ ದೇವರಾಜ್, ಬೆಂಗಳೂರಿನ ದೊಡ್ಡಾಲದ ಮರದ ಸುತ್ತಮುತ್ತ ನಿರ್ಮಿಸಲಾದ ಸೆಟ್‌ನಲ್ಲಿ ಕೊನೆ ಹಂತದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಅವರು ತಮ್ಮ ಮನದಾಳದ ಅಸಮಾಧಾನವನ್ನು ಹೊರಹಾಕಿದರು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮೋಜು, ಮೀಮ್ಸ್ ಹಾಗೂ ಅಶ್ಲೀಲ ಕಾಮೆಂಟ್‌ಗಳ ಬಗ್ಗೆ ಪ್ರಜ್ವಲ್ ಖಾರವಾಗಿ ಪ್ರತಿಕ್ರಿಯಿಸಿದರು. ಇತ್ತೀಚೆಗೆ ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ ಮಾಡಿದ ಕೆಲವರು ಕಾನೂನಿನ ಬಲೆಗೆ ಸಿಲುಕಿದ್ದು, ಜೈಲು ಕಂಡಿದ್ದಾರೆ. ಇದೇ ರೀತಿಯಾಗಿ, ತನ್ನ ಹಾಗೂ ಪತ್ನಿ ರಾಗಿಣಿ ಕುರಿತು ಕೂಡಾ ಟ್ರೋಲ್ಸ್‌ಗಳು ಗಡಿ ಮೀರಿ ಹೋಗುತ್ತಿರುವುದಾಗಿ ಹೇಳಿದರು.

ವೈಯಕ್ತಿಕ ಬದುಕು ಗುರಿಯಾಗಿಸಿದ ಟ್ರೋಲ್ಸ್, “ಮದುವೆಯಾಗಿದು 10 ವರ್ಷ ಆಯಿತು. ಮಗು ಮಾಡಿಕೊಂಡಿಲ್ಲವೆಂದರೆ, ರಾಗಿಣಿ ಅವರ ಫಿಗರ್ ಹಾಳಾಗುತ್ತೆ ಅಂತಾ ಮೀಮ್ಸ್ ಮಾಡಿದರು. ಅದನ್ನು ನೋಡಿ ರಾಗಿಣಿ ತುಂಬಾ ಬೇಸರಪಟ್ಟರು. ಆದರೆ ನಾನು ಅವಳಿಗೆ ಸಮಾಧಾನ ಹೇಳಿದೆ,” ಎಂದು ಪ್ರಜ್ವಲ್ ನೋವಿನಿಂದ ಹೇಳಿದರು. ಈ ಹಿಂದೆ ರಾಗಿಣಿ ಅವರ ಸಹೋದರಿಗೆ ಕೆಲ ಕಿಡಿಗೇಡಿಗಳು ಅಶ್ಲೀಲ ಫೋಟೋ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಕಿಡಿಕಾರುತ್ತಾ, “ಧೈರ್ಯ ಇದ್ದರೆ ಮುಂದೆ ಬಂದು ಹೇಳಿ. ಎಲ್ಲರ ಕೈಯಲ್ಲೂ ಫೋನ್ ಇದೆ. ಅವನಿಗಿರುವ ಪ್ರೆಸ್ಟ್ರೇಷನ್ ಯಾರಿಗೋ ಬೈಯಬೇಕು ಅನ್ಸುತ್ತೆ. ನಾವು ಈಜಿಯಾಗಿ ಸಿಕ್ತೀವಿ. ಬಚ್ಚಿಟ್ಟುಕೊಂಡು ಬೇಕಾಬಿಟ್ಟಿ ಕಾಮೆಂಟ್ ಮಾಡುವವರನ್ನು ಗಂಡಸರೆಂದು ಕರೆಯಲಾಗುತ್ತದೆಯಾ?” ಎಂದು ಪ್ರಶ್ನಿಸಿದರು. “ಈ ರೀತಿ ತಪ್ಪು ನಡೆಗಳು ನಡೆಯಬಾರದೆಂದರೆ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಅಶ್ಲೀಲತೆ, ನಿಂದನೆ ಹೆಚ್ಚುತ್ತಲೇ ಇರುತ್ತದೆ,” ಎಂದು ನಟ ಮನವಿ ಮಾಡಿದರು.

ನಟ ಪ್ರಜ್ವಲ್ ದೇವರಾಜ್ ಅವರ ಮಾತುಗಳು ಇಂದಿನ ಡಿಜಿಟಲ್ ಯುಗದಲ್ಲಿ ಟ್ರೋಲಿಂಗ್, ಮೀಮ್ಸ್ ಹಾಗೂ ಆನ್‌ಲೈನ್ ಅಬ್ಯೂಸ್ ಕುರಿತು ದೊಡ್ಡ ಚರ್ಚೆ ಹುಟ್ಟಿಸಿವೆ. ಸಿನಿತಾರೆಗಳೇ ಅಲ್ಲ, ಸಾಮಾನ್ಯ ಜನರು ಸಹ ಇಂತಹ ಆನ್‌ಲೈನ್ ಹಲ್ಲೆಗಳ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕಾನೂನು ಕ್ರಮ ಹಾಗೂ ಸಾಮಾಜಿಕ ಜವಾಬ್ದಾರಿ ಮಾತ್ರವೇ ಪರಿಹಾರವೆಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.