Back to Top

ಹ್ಯಾಕರ್ ಜಾಲದಿಂದ ಲಕ್ಷಾಂತರ ರೂಪಾಯಿ ವಂಚನೆ; ಉಪೇಂದ್ರ ನೀಡಿದ ಸ್ಪಷ್ಟನೆ!

SSTV Profile Logo SStv September 15, 2025
ಸೈಬರ್ ವಂಚಕರ ಬಲೆಗೆ ನಟ ಉಪೇಂದ್ರ – ಪ್ರಿಯಾಂಕಾ
ಸೈಬರ್ ವಂಚಕರ ಬಲೆಗೆ ನಟ ಉಪೇಂದ್ರ – ಪ್ರಿಯಾಂಕಾ

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸೈಬರ್ ವಂಚಕರ ಬಲೆಗೆ ಸಿಕ್ಕ ಘಟನೆ ಇದೀಗ ದೊಡ್ಡ ಸುದ್ದಿಯಾಗಿದೆ. ಇವರ ಮೊಬೈಲ್ ನಂಬರ್‌ಗಳನ್ನು ಹ್ಯಾಕ್ ಮಾಡಿ, ಪರಿಚಿತರಿಗೆ ವಾಟ್ಸಪ್ ಮೂಲಕ ತುರ್ತು ಹಣ ಸಹಾಯ ಕೇಳಿದ ಖದೀಮರು, ಹಲವರಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಇನ್ನೂ ಆಘಾತಕರ ಸಂಗತಿ ಏನೆಂದರೆ, ಸ್ವತಃ ಉಪೇಂದ್ರ ಅವರ ಮಗ ಆಯುಷ್ ಕೂಡ ಈ ವಂಚಕರಿಗೆ ಬಲಿಯಾಗಿ ₹55,000 ಕಳೆದುಕೊಂಡಿದ್ದಾರೆ.

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಉಪೇಂದ್ರ ಅವರು ಈ ಘಟನೆಗೆ ಸಂಬಂಧಿಸಿದಂತೆ ವಿವರಿಸಿದರು: “ಒಂದು ನಂಬರ್‌ನಿಂದ ಪ್ರಿಯಾಂಕಾ ಅವರಿಗೆ ಕರೆ ಬಂತು. ನೀವು ಏನಾದರೂ ಆರ್ಡರ್ ಮಾಡಿದ್ದೀರಿ, ಅದರ ಅಡ್ರೆಸ್ ಬೇಕು ಎಂದು ಕೇಳಿದರು. ಜೊತೆಗೆ ಸ್ಟಾರ್ ಮತ್ತು ಹ್ಯಾಶ್ ಇರುವ ನಂಬರ್‌ಗೆ ಕರೆ ಮಾಡಬೇಕೆಂದು ಹೇಳಿದರು. ಪ್ರಿಯಾಂಕಾ ಫೋನ್‌ನಿಂದ ಆಗದಿದ್ದ ಕಾರಣ, ನನ್ನ ಫೋನ್ ಹಾಗೂ ಮ್ಯಾನೇಜರ್ ಮಾದೇವ ಅವರ ಫೋನ್‌ನಿಂದ ಪ್ರಯತ್ನಿಸಿದೆವು. ಅದಾದ ಮೇಲೆ ಮೂವರ ಮೊಬೈಲ್‌ಗಳು ಹ್ಯಾಕ್ ಆಯಿತು” ಎಂದು ಉಪೇಂದ್ರ ಹೇಳಿದ್ದಾರೆ.

ಹ್ಯಾಕ್ ಆದ ಬಳಿಕ ಏನು ಸಂಭವಿಸಿತು? ಹ್ಯಾಕ್ ಆದ ನಂತರ ಉಪೇಂದ್ರ – ಪ್ರಿಯಾಂಕಾ ಅವರ ಫೋನ್‌ನಿಂದ ಪರಿಚಿತರಿಗೆ ತುರ್ತು ಹಣ ಸಹಾಯ ಕೇಳುವ ಸಂದೇಶಗಳು ಹೋಗತೊಡಗಿದವು. “ಅರ್ಜೆಂಟಾಗಿ ₹55,000 ಕಳಿಸಿ” ಎಂಬ ಸಂದೇಶಗಳು ಸ್ನೇಹಿತರಿಗೆ ಕಳುಹಿಸಲ್ಪಟ್ಟವು. ಫೋನ್ ಮಾಡಿದರೆ ಸಂಪರ್ಕ ಸಾಧ್ಯವಾಗದ ಕಾರಣ, ಏನಾದರೂ ತುರ್ತು ಪರಿಸ್ಥಿತಿ ಇರಬಹುದು ಎಂದು ಭಾವಿಸಿದ ಕೆಲವರು ನಿಜವಾಗಿಯೇ ಹಣ ಕಳುಹಿಸಿದ್ದಾರೆ.

ಉಪೇಂದ್ರ ಅವರ ಪುತ್ರ ಆಯುಷ್ ಕೂಡ ಇದೇ ವಂಚನೆಗೆ ಬಲಿಯಾಗಿ ₹55,000 ಕಳೆದುಕೊಂಡಿದ್ದಾರೆ. ಉಪೇಂದ್ರ ಈ ಸಂದರ್ಭ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು: “ಇಂಥ ಸಂದೇಶಗಳು ಬಂದರೆ ಯಾರೂ ಕೂಡ ಹಣ ಕಳಿಸಬೇಡಿ. ಇದು ಖದೀಮರ ಕೃತ್ಯ. ನನ್ನ ಮಗನೂ ಕೂಡ ಮೋಸಕ್ಕೆ ಸಿಕ್ಕಿದ್ದಾನೆ. ಸ್ನೇಹಿತರಿಂದಲೂ ಲಕ್ಷಾಂತರ ರೂಪಾಯಿ ಹೋದಂತಿದೆ. ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ” ಎಂದು ತಿಳಿಸಿದರು.

ಘಟನೆ ತಿಳಿಯುತ್ತಿದ್ದಂತೆಯೇ ಉಪೇಂದ್ರ ಮತ್ತು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹ್ಯಾಕರ್‌ಗಳ ಜಾಲಕ್ಕೆ ಹೆಚ್ಚು ಜನ ಬಲಿಯಾಗದಂತೆ ಅವರು ಮನವಿ ಮಾಡಿದ್ದಾರೆ. ಈ ಘಟನೆ ಸೈಬರ್ ಸುರಕ್ಷತೆ ಎಷ್ಟು ಮುಖ್ಯವೆಂದು ಮತ್ತೊಮ್ಮೆ ನೆನಪಿಸಿದೆ. ಅಪರಿಚಿತ ನಂಬರ್‌ಗಳಿಂದ ಬರುವ ಕರೆಗಳು ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವ ಮುನ್ನ ಖಚಿತಪಡಿಸಿಕೊಳ್ಳುವುದು ಅಗತ್ಯ.